Description
ಎಲ್ಲಾ ತರಹದವರು ಇದ್ದಾರೆ. ಹಿಟ್ಲರ್ ಕಾಲಮಾನದಲ್ಲಿ ಆತನನ್ನು ಬೆಂಬಲಿಸುವವರು ಇದ್ದರು ಹಾಗೂ ಆತನ ಸಿದ್ಧಾಂತಗಳನ್ನು ವಿರೋಧಿಸುವವರೂ ಇದ್ದರು. ಅದೇ ರೀತಿಯಾಗಿ ಇವತ್ತಿನ ನಮ್ಮ ಹಿಟ್ಲರನನ್ನು ಬೆಂಬಲಿಸುವವರು ಇದ್ದಾರೆ ವಿರೋಧಿಸುವವರೂ ಇದ್ದಾರೆ. ಈ ಎರಡು ಬಿಟ್ಟು ಮಧ್ಯೆ ನಿಂತು ಆಟ ನೋಡುವವರೂ ಇದ್ದಾರೆ. ಬುದ್ಧ ಹೇಳಿದ್ದು ಸುವರ್ಣ ಮಧ್ಯಮ. ಅದು ಈಗ ಇವರು ಹೇಳುವ ಮಧ್ಯಮ ಮಾರ್ಗವಂತೂ ಖಂಡಿತ ಅಲ್ಲ. ಮಧ್ಯೆ ಇರುವೆನೆಂದು ಸ್ವಂತ ಆಲೋಚನೆ ಇಲ್ಲದವರು, ಖಚಿತ ನಿರ್ಧಾರ ಕೈಗೊಳ್ಳದವರು, ಸ್ಪಷ್ಟತೆ ಇರದವರು ತುಂಬಾ ಅಪಾಯಕಾರಿಗಳಾಗಿ ಸಂದರ್ಭಕ್ಕನುಗುಣವಾಗಿ ಎರಡು ಕಡೆ ವೇಷ ಬದಲಿಸುತ್ತ ಇರುತ್ತಾರೆ. ಇಂತಹ ಮಾದರಿಗಳನ್ನು ನೋಡಿದಾಗ ಸಹಜವಾಗಿಯೇ ನಮಗೆ ಬೇಸರ ಮೂಡುತ್ತದೆ, ನಿರಾಸೆಯಾಗುತ್ತದೆ, ಹಾಗಂತ ಸಂಪೂರ್ಣ ನಿರಾಶರಾಗುವ ಅಗತ್ಯವೂ ಇಲ್ಲ. ಸ್ಪಷ್ಟತೆಯಿಂದ, ಖಚಿತ ನಿಲುವಿಟ್ಟುಕೊಂಡು ಬರೆಯುವವರು ಸಹ ಸಾಕಷ್ಟು ಇದ್ದಾರೆ. ಅಂತಹ ಧ್ವನಿಗಳನ್ನು ಅಡಗಿಸುವ ಪ್ರಯತ್ನವೂ ನಡೆಯುತ್ತಿದೆ. ಯಾವಾಗಲೂ ಗಟ್ಟಿಯಾಗಿ ಸೈದ್ಧಾಂತಿಕವಾಗಿ ಸ್ಪಷ್ಟತೆಯಿಂದ ಮಾತನಾಡುವ ಜನ ಬೆರಳೆಣಿಕೆಯಷ್ಟು ಇರುತ್ತಾರೆ, ಬಹುಸಂಖ್ಯಾತರು ಯಾವಾಗಲೂ ಗಾಳಿಯ ಜೊತೆ ತೂರಿಕೊಂಡು ಹೋಗುವುದನ್ನು ನೋಡುತ್ತಾರೆ. ಹೊಗಳಲು 200 ಪದಗಳು ಸಾಕು, ಅವವೇ ಪದದಲ್ಲಿ ದೇವರಿಂದ ಸೈತಾನನ ತನಕ ಎಲ್ಲರನ್ನು ಹೊಗಳಬಹುದು. ಆದರೆ ವಿಮರ್ಶೆ ಮಾಡಲು? ನಿಮಗೆ ಕಡಿಮೆ ಪದಗಳು ಸಾಕಾಗುವುದಿಲ್ಲ. ಖಚಿತವಾಗಿರಬೇಕಾಗುತ್ತದೆ, ತಿಳಿವಿರಬೇಕಾಗುತ್ತದೆ, ಆ ರಿಸ್ಕ್ ತೆಗೆದುಕೊಳ್ಳಲು ಹೋಗದೇ ಹೊಗಳುವ ರೋಗಕ್ಕೆ ತುತ್ತಾಗುವುದು ಈಗ ಹೆಚ್ಚಿದೆ. ಸಾಹಿತ್ಯ ಈ ಅಪಾಯವನ್ನು ಹೆಚ್ಚು ಎದುರಿಸುತ್ತಿದೆ. ಅಕ್ಷರ ಬಲ್ಲವರು ಭಟ್ಟಂಗಿಗಳಾದರೆ ಮುಗಿಯಿತು ಲೋಕ ಕಲ್ಯಾಣದ ಕತೆ ಎನ್ನುತ್ತಾರೆ ಕವಯಿತ್ರಿ ಡಾ. ಎಚ್ ಎಸ್ ಅನುಪಮಾ. ಅವರ ಮಾತುಗಳನ್ನು ಕಟ್ಟಿ ಕೊಟ್ಟಿದ್ದಾರೆ ಬಳ್ಳಾರಿ ಜಿಲ್ಲೆ ತೋರಣಗಲ್ನ ಯುವಕವಿ ಸಯ್ಯದ್ ಸಿಕಂದರ್ ಮೀರ್ ಅಲಿ.
Reviews
There are no reviews yet.