Description
ಯುವಜನರಲ್ಲಿ ಅಪಾರವಾದ ಪ್ರೀತಿ, ವಿಶ್ವಾಸ, ಭರವಸೆ ಇಟ್ಟುಕೊಂಡಿದ್ದ ಅಡಿಗರು ಸದಾ ಓಡಾಡುತ್ತಿದ್ದದ್ದು, ಚರ್ಚಿಸುತ್ತಿದ್ದದ್ದು ಯುವಕರ ಜೊತೆಗೇ. ಗಾಂಧಿ ಬಜಾರಿನ ಹೋಟೆಲಿನಲ್ಲಿ ಕಾಫಿ ಕುಡಿದ ನಂತರ ನಾವು ಹರಟೆ ಹೊಡೆಯುವುದಕ್ಕಾಗಿ ಕೆನರಾ ಬ್ಯಾಂಕಿನ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳುತ್ತಿದ್ದೆವು ಎಂದು ಈ ಮೊದಲೇ ಹೇಳಿದೆನಷ್ಟೆ. ಒಂದು ಸಂಜೆ ನಮಗಿಂತ ಮೊದಲೇ ಏಳೆಂಟು ಮಂದಿ ಆ ಮೆಟ್ಟಿಲುಗಳನ್ನು ಆಕ್ರಮಿಸಿಕೊಂಡುಬಿಟ್ಟಿದ್ದರು. ಅಲ್ಲೇ ಎದುರಿಗಿದ್ದ ಸಣ್ಣ ಟ್ಯಾಗೋರ್ ಪಾರ್ಕಿನಲ್ಲಿ ಕೂತರೆ ಹೇಗೆ? ನಾನು ಕೂಡಲೇ ಆ ಪಾರ್ಕಿನೊಳಕ್ಕೆ ಹೋಗಿ ಒಂದು ಕಲ್ಲುಬೆಂಚು ಖಾಲಿಯಾಗಿರುವುದನ್ನು ಕಂಡು ಹಿಂತಿರುಗಿ ನೋಡಿದರೆ ಅಡಿಗರು ಮತ್ತು ಅಂದು ಜತೆಗಿದ್ದ ಇತರರು ಒಳಕ್ಕೆ ಬರದೆ ಹೊರಗೇ ನಿಂತುಬಿಟ್ಟಿದ್ದರು. ನಾನು “ಬನ್ನಿ ಸರ್, ಜಾಗ ಇದೆ” ಎಂದದ್ದಕ್ಕೆ ಅಡಿಗರ ಹೇಳಿದ್ದೇನು ಗೊತ್ತೆ? “ಬೇಡಯ್ಯಾ, ಒಳಗೆಲ್ಲ ಬರೀ ಮುದುಕರೇ ತುಂಬಿದ್ದಾರೆ”!
*
ಕಾವ್ಯಕರ್ಮವನ್ನು ಕುರಿತು ಒಂದೆಡೆ ಅಡಿಗರು ಬರೆದಿರುವುದು ಹೀಗೆ: “ಕವಿಯ ಮನಸ್ಸಿನಲ್ಲಿ ಇರುವ ಭಾವವಾಗಲೀ ಅನುಭವವಾಗಲೀ ಭಾಷೆಯಲ್ಲಿ ಪ್ರತಿಮೆಗಳ ಮೂಲಕ ವ್ಯಕ್ತಗೊಂಡಾಗ ಅದು ಏನಾಗುತ್ತದೆಂಬುದು ಪೂರ್ವನಿಶ್ಚಿತವಲ್ಲ. ಬರೆದದ್ದರೊಡನೆ ಕವಿಯ ಅರಿವಿಗೇ ಬಾರದ ಅನೇಕ ಅಂಶಗಳು, ಪ್ರತಿಮೆ ರೂಪಕಗಳೊಡನೆ ಚಿಮ್ಮುವ ಒಳಮನಸ್ಸಿನ ಅಂಶಗಳು, ಭಾಷೆಯೊಡನೆ ಬಂದು ಬೆರೆಯುವ ಸಾಮಾಜಿಕಾಂಶಗಳು ಇವು ಬಂದು ಸೇರದೆ ಕಾವ್ಯಕ್ಕೆ ಸಹಜವಾದ ರೂಪಕ್ಕೆ ಜೀವಸತ್ವ ಬಂದು ಸೇರುವುದಿಲ್ಲ…. ಒಂದು ಕಲೆ ಅಥವಾ ಕವನ ಸಫಲವಾಗುವುದು ಅದರಲ್ಲಿ ಕಲೆಗಾರ ಕಾಲವನ್ನು ತಡೆಹಿಡಿದು ನಿಲ್ಲಿಸಿದಾಗ. ಹೀಗೆ ನಿಲ್ಲಿಸುವುದು ಸಾಧ್ಯವಾಗುವುದು ಭೂತ ಭವಿಷ್ಯತ್ತು ವರ್ತಮಾನಗಳನ್ನು ಒಂದೇ ಬಿಂದುವಿನಿಲ್ಲಿ ತಂದು ಕೇಂದ್ರೀಕರಿಸಿದಾಗ. ಇಂಥ ಕವನಗಳು ತೀರ ಅಪೂರ್ವವಾದಂಥವು. ಅಂಥವನ್ನು ಬರೆದಿದ್ದರೆ ನಾನು ಕೃತಾರ್ಥ.”
-ಒಳಪುಟಗಳಿಂದ
Reviews
There are no reviews yet.