Description
ಒಂದು ಕುಟುಂಬದ ಸಂಪಾದನೆ ಮತ್ತು ಖರ್ಚಿನ ವಿವರದ ಬಗ್ಗೆ ಅರಿವಿಟ್ಟು ಕೊಂಡರೆ ಆ ಕುಟುಂಬದ ಆಯ-ವ್ಯಯದ ಅಂದಾಜಾಗುತ್ತದೆ. ಅದೇ ರೀತಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಆಯ-ವ್ಯಯದ ವಿವರಗಳು ಜನಸಾಮಾನ್ಯರಿಗೆ ತಿಳಿದರೆ ಆಡಳಿತ ಯಂತ್ರದ ಬಗ್ಗೆ ಅರಿವು ಮೂಡಿ ಸಾಮಾಜಿಕ ಜವಾಬ್ದಾರಿ ಜನ ಸಮುದಾಯದಲ್ಲಿ ಬೆಳೆಯುತ್ತದೆ.
ಹಾಗಾಗಿ ಬಜೆಟ್ ಬಗ್ಗೆ ಎಲ್ಲರಿಗೂ ಅರಿವಿರುವುದು ಸುಕ್ಷೇಮ ಮತ್ತು ಸುಗಮ ಆಡಳಿತಕ್ಕೆ ನಾಂದಿ ಹಾಡುತ್ತದೆ. ಅದು ಕೇವಲ ಅಂಕಿ-ಅಂಶಗಳ ಬಗ್ಗೆ ಆಗಿರದೇ ಪ್ರತಿ ಹಣದ ಲೆಕ್ಕಾಚಾರವೂ ಕೂಡ ತೆರಿಗೆ ತುಂಬುವ ನಮಗೆ ದೊರೆಯಬೇಕು.
ಆದರೆ ಈಗಿನ ನಾಗರಿಕರಲ್ಲಿ ಸರ್ಕಾರದ ಬಜೆಟ್ ಬಗ್ಗೆ ಜಾಢ್ಯವೊಂದು ಬೆಳೆದು ಬಿಟ್ಟಿದ್ದು ಒಂದು ಸಮೂಹವೋ, ಗುಂಪೋ ಆಗಿ ಪೂರ್ವಾಗ್ರಹ ಪೀಡಿತ ಆಲೋಚನೆಗಳೊಂದಿಗೆ ‘ಅಯ್ಯೋ, ನಮಗೇನು ಸಿಕ್ಕಿದೆ?’ ಎಂದು ಕರುಬಿ ನಂತರ ಸುಮ್ಮನಾಗಿ ಬಿಡುತ್ತಾರೆಯೇ ಹೊರತು ಯಾವುದೇ ಕಾರಣಕ್ಕೂ ಇದು ನಮ್ಮ ಹಣ ಇದನ್ನು ಸರ್ಕಾರ ಎಲ್ಲಿ ಹೇಗೆ ವಿನಿಯೋಗಿಸುತ್ತಿದೆ? ಮತ್ತೆಲ್ಲಿಂದ ಹಣ ಸರ್ಕಾರಕ್ಕೆ ಒದಗುತ್ತದೆ? ಎಲ್ಲಿ ಎಲ್ಲಿ ಸರ್ಕಾರ ಸಾಲ ತೆಗೆದುಕೊಂಡಿದೆ? ಯಾವ ಯಾವ ದೇಶಕ್ಕೆ ಸಾಲ ಕೊಟ್ಟಿದೆ? ಎಂಬ ಮಹತ್ವದ ಮಾಹಿತಿಗಳ ಬಗ್ಗೆ ಮೌನ ತಾಳಿ ಹಗರಣಗಳಿಗೆ ನಾವೇ ವೇದಿಕೆಯಾಗುತ್ತೇವೆ.
ಅದರಲ್ಲೂ ಒಕ್ಕೂಟ ವ್ಯವಸ್ಥೆಯಾದ ದೇಶದಲ್ಲಿ ಬೃಹತ್ ತೆರಿಗೆಯ ಹಣದಲ್ಲಿ ನಮ್ಮ ಪಾಲೆಷ್ಟು? ಅದು ಸರಿಯಾಗಿ ದೊರಕೀತೆ? ಆರ್ಥಿಕತೆಯಲ್ಲಿರುವ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ್ಯಾವುವು? ಎಂಬುವ ಪ್ರಶ್ನೆಗಳು ಅತಿ ಮಹತ್ವದ್ದಾಗಿವೆ.
ಇಂತಹ ಹಲವು ನ್ಯಾಯಸಮ್ಮತ ಪ್ರಶ್ನೆಗಳಿಗೆ ಉತ್ತರವಾಗಿ, ಸರ್ಕಾರಕ್ಕೆ ನಾವು ನೀಡುವ ತೆರಿಗೆಯ ಕುರಿತಾಗಿರುವ ಅಥವಾ ಸರ್ಕಾರ ಮಾಡುವ ಎಲ್ಲ ಆರ್ಥಿಕ ವಹಿವಾಟಿನ ಸಮಗ್ರ ಅಧ್ಯಯನದ ಪ್ರವೇಶಕ್ಕೆ ಒಂದು ಚಿಮ್ಮುಹಲಗೆಯೇ ಈ ನಮ್ಮ ‘ಬಜೆಟ್ : ಪ್ರಾರ್ಥಮಿಕ ಪರಿಚಯ’. ಇದನ್ನು ಓದುತ್ತಾ ಹೋದಾಗ ಸಾರ್ವಜನಿಕರಾದ ನಾವು ಎಡವುವುದೆಲ್ಲಿ? ಎಡವದೇ ಇರಲು ಮಾಡಬೇಕಾದ ಆಲೋಚನೆಗಳು ಯಾವ ರೀತಿಯವು? ಎಂಬುದರ ಸಂಪೂರ್ಣ ದಿಕ್ಕೂಚಿಯಾಗಿ ಈ ಪುಸ್ತಕ ಮೂಡಿ ಬಂದಿದೆ.
– ಬಿ. ರಾಜಶೇಖರಮೂರ್ತಿ, ಜನ ಪ್ರಕಾಶನ
Reviews
There are no reviews yet.