Description
ನಮ್ಮ ದೇಶದಲ್ಲಿ ಹೆಣ್ಣನ್ನು ದೇವಿ ಎಂದು ಅಟ್ಟಕ್ಕೇರಿಸುತ್ತಿರುವಾಗಲೇ ಆಕೆಯನ್ನು ಕನಿಷ್ಟ ಮನುಷ್ಯಳಾಗಿಯೂ ನಡೆಸಿಕೊಂಡಿಲ್ಲ ಎಂಬುದು ಕಣ್ಣಿಗೆ ರಾಚುತ್ತದೆ. ಮನೆಯ ಒಳಗೇ ಇದ್ದುಕೊಂಡು ಗೃಹಕೃತ್ಯಗಳನ್ನು ನಿರ್ವಹಿಸುತ್ತಾ ದೇಶಸೇವೆ ಮಾಡುವ ವೀರಪುರುಷರಿಗೆ ಬೆಂಬಲವಾಗಿ ನಿಲ್ಲುವ ಹಿನ್ನೆಲೆಯ ಕೆಲಸ ಅವಳದಾಗಿತ್ತೇ ವಿನಃ ನೇರವಾಗಿ ಅವಳೇ ವಿವಿಧ ಕ್ಷೇತ್ರಗಳಲ್ಲಿ, ಕಾಣಿಸಿಕೊಳ್ಳುವಂತಹ ಸ್ಥಿತಿ ಇರಲಿಲ್ಲ.
ಆದರೆ ಸಮಾಜದ ಅರ್ಧಭಾಗದಷ್ಟಿರುವ ಮಹಿಳೆಯರ ಭಾಗವಹಿಸುವಿಕೆ ಹಾಗೂ ಪ್ರಾತಿನಿಧ್ಯ ಸಮ ಪ್ರಮಾಣದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಇಲ್ಲದೇ ಹೋದರೆ ದೇಶ ಮುನ್ನಡೆಯುವುದು ಸಾಧ್ಯವಿಲ್ಲ. ಮನೆಯ ಒಳಗೆ ಹಾಗೂ ಹೊಲಗದ್ದೆಗಳಲ್ಲಿ ಬಿಡುವಿಲ್ಲದ ಕೆಲಸ ಮಾಡುವ ಮಹಿಳೆಯರ ಕೆಲಸಕ್ಕೆ ಮಾನ್ಯತೆಯೂ ಇಲ್ಲ, ಆರ್ಥಿಕ ಮೌಲ್ಯವೂ ಇಲ್ಲ. ಇದು ಮಹಿಳೆಯರ ವ್ಯಕ್ತಿತ್ವ ವಿಕಸನದ ದೃಷ್ಟಿಯಿಂದ ಹಾಗೂ ದೇಶದ ಮುನ್ನಡೆಯ ದೃಷ್ಟಿಯಿಂದ ಅಪೇಕ್ಷಣೀಯವಲ್ಲ. ಹೀಗಾಗಿ ಶಿಕ್ಷಣ ಮತ್ತು ವಿವಿಧ ಔದ್ಯೋಗಿಕ, ಆಡಳಿತಾತ್ಮಕ ಕ್ಷೇತ್ರಗಳಲ್ಲಿ ಮಹಿಳೆಯರು ಭಾಗವಹಿಸಲು ಅನುವು ಮಾಡಿಕೊಡುವ ಬಗೆಯಲ್ಲಿ ಒಂದಷ್ಟು ಕ್ರಮಗಳನ್ನು ಕೈಗೊಳ್ಳಬೇಕೆಂಬ ಚಿಂತನೆ ಭಾರತ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲೇ ಮೈದಾಳಿತು.
ಮಹಿಳಾ ಮೀಸಲಾತಿ ಏಕೆ?
ಮಹಿಳಾ ಮೀಸಲಾತಿಯ ಅಗತ್ಯವೇನು? ಎಂಬುದನ್ನು ಮೊದಲು ಮನವರಿಕೆ ಮಾಡಿಕೊಂಡು ಮುಂದುವರೆಯಬೇಕಾಗುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ಮಹಿಳಾ ಸಾಕ್ಷರತಾ ಪ್ರಮಾಣ ಶೇಕಡಾ 8ಕ್ಕಿಂತ ಕಡಿಮೆ ಇತ್ತು. ಅದರ ಜೊತೆಗೆ ಬಾಲ್ಯವಿವಾಹ, ವರದಕ್ಷಿಣೆ, ತಾಯಿ ಮರಣ ಪ್ರಮಾಣ, ಲಿಂಗ ತಾರತಮ್ಯ ಮುಂತಾದವು ಮಹಿಳೆಯರ ಪ್ರಗತಿಗೆ ಅಡ್ಡಿಯಾಗಿದ್ದವು. ಹೆಣ್ಣುಮಗುವನ್ನು ಹುಟ್ಟುವ ಮೊದಲೇ ಕೊಲ್ಲುವುದು ಒಂದೆಡೆಯಾದರೆ ಹುಟ್ಟಿದ ಹೆಣ್ಣುಮಕ್ಕಳೂ ಅಪೌಷ್ಟಿಕತೆಯಿಂದ ಬಳಲುವ ದುರವಸ್ಥೆ ಇತ್ತು.
ಇದನ್ನೂ ಓದಿ: ದಲಿತರ ಮೀಸಲಾತಿ: ಬೆಳಕಾಗಬೇಕಾಗಿದೆ ಬೆಂಕಿ – ಡಾ.ರವಿಕುಮಾರ್ ನೀಹ
Reviews
There are no reviews yet.