Description
ಚನ್ನಕೇಶವ ಅವರು ತಮ್ಮ ನೀನಾಸಂ ದಿನಗಳ ಖಾಸಗಿ ಅನುಭವಗಳನ್ನು ಹಂಚಿಕೊಂಡ ಕೃತಿ ‘ರಂಗ ಪುರಾಣ’
ಚನ್ನಕೇಶವ ತುಂಬಾ ಬಳಸುತ್ತಿದ್ದ ಶಬ್ದ ಕಮ್ಯೂನಿಟಿ. ಯಾವ ವಿಷಯದ ಮೇಲಿನ ಮಾತುಕತೆಯಾದರೂ ಹೇಗಾದರೂ ಮಾಡಿ ಅದನ್ನು ಕಮ್ಯೂನಿಟಿಗೆ ತಳಕು ಹಾಕುತ್ತಿದ್ದರು. ಅವರ ಕಮ್ಯೂನಿಟಿಯ ಅರ್ಥವಿಸ್ತಾರ ಬಹು ದೊಡ್ಡದು ಮತ್ತು ಅದನ್ನು ಸಂದರ್ಭಕ್ಕೆ ತಕ್ಕಂತೆ ಅರ್ಥಮಾಡಿಕೊಳ್ಳಬೇಕಿತ್ತು. ಯಾಕೆಂದರೆ ಅವರು ಏಕಕಾಲಕ್ಕೆ ಹಲವು ಕಮ್ಯೂನಿಟಿಗಳಲ್ಲಿ ಸಕ್ರಿಯವಾಗಿದ್ದರು. ಕಲೆಯ ವಿಷಯಕ್ಕೆ ಬಂದರೆ ಅವರ ಚಿತ್ರಕಲಾ ಪರಿಷತ್ತಿನ ನಂಟಿರುವ ಕಮ್ಯೂನಿಟಿ, ನೀನಾಸಮ್ ವಿದ್ಯಾರ್ಥಿಗಳ ಕಮ್ಯೂನಿಟಿ, ರಂಗಭೂಮಿಯ ಕಮ್ಯೂನಿಟಿ, ಲೋಕಚರಿತದ ಕಮ್ಯೂನಿಟಿ, ಮಕ್ಕಳ ಬೇಸಿಗೆ ಶಿಬಿರದ ಮೂಲಕ ರಾಜ್ಯದಾದ್ಯಂತ ಹರಡಿದ್ದ ಕಮ್ಯೂನಿಟಿ, ಅದೇ ರೀತಿ ಚಿತ್ರರಂಗ, ಸಾಹಿತ್ಯ, ಗೊಂಬೆಯಾಟ ಹೀಗೆ ಹಲವು ಕಮ್ಯೂನಿಟಿಗಳ ಭಾಗವಾಗಿದ್ದ ಚನ್ನಕೇಶವ ಸದಾ ಎಲ್ಲರನ್ನೂ ಒಳಗೊಳ್ಳಬೇಕೆಂಬ ತುಡಿತವಿದ್ದವರು. ಅದು ಯೋಚಿಸಿ ತಳೆದ ನಿಲುವಲ್ಲ, ಅವರಿದ್ದದ್ದೇ ಹಾಗೆ. ಆದ್ದರಿಂದ ಅವರೊಬ್ಬರು ಇದ್ದರೆ ಸಾವಿರ ಜನ ಜೊತೆಗಿದ್ದ ಹಾಗೆ. ದೋಷವೆನ್ನುವಷ್ಟರ ಮಟ್ಟಿಗೆ ಅವರದು ನಿಸ್ವಾರ್ಥ ಸ್ವಭಾವ. ಯಾವಾಗಲೂ, ತನ್ನದಕ್ಕಿಂತ ಇತರರ ಕಷ್ಟಗಳು ಹೆಚ್ಚಿನದೆಂದು ಭಾವಿಸುತ್ತಿದ್ದವರು.
ವಿವೇಕ ಶಾನಭಾಗ
=====================================
ಚನ್ನಕೇಶವ ಜಿ. ಅವರು ಚಿತ್ರಕಲೆ ಮತ್ತು ರಂಗಭೂಮಿಯ ಪದವೀಧರ. ರಂಗಭೂಮಿಯ ವಿವಿಧ ಕ್ಷೇತ್ರಗಳಲ್ಲಿ ಸ್ವತಃ ತಮ್ಮನ್ನು ತೊಡಗಿಸಿಕೊಂಡು, ಅಭಿನಯ, ನಿರ್ದೇಶನ, ನಾಟಕ ರಚನೆಯ ಜೊತೆಗೆ ಹವ್ಯಾಸಿ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ರಂಗ-ಕಾರ್ಯಾಗಾರಗಳನ್ನು ನಡೆಸಿಕೊಟ್ಟಿದ್ದರು.
೨೦೦೩ರಲ್ಲಿ ಅಮೇರಿಕಾದ `ಬ್ರೆಡ್ ಅಂಡ್ ಪಪೆಟ್’ ಸಂಸ್ಥೆಯ ಎರಡು ತಿಂಗಳ ಕಾರ್ಯಾಗಾರಕ್ಕೆ ಭಾರತದಿಂದ ವಿಶೇಷ ಆಹ್ವಾನಿತರಾಗಿದ್ದರು. ೨೦೦೯ರಲ್ಲಿ ಬ್ರಿಟಿಷ್ ಕೌನ್ಸಿಲ್ ಏರ್ಪಡಿಸಿದ್ದ ಸ್ಕಾಟ್ಲ್ಯಾಂಡ್ನ ಎಡಿನ್ಬರೋದಲ್ಲಿ ನಡೆದ `ಥಿಯೇಟರ್ ಸೂತ್ರ’ ರಂಗ ಸಮ್ಮೇಳನಕ್ಕೆ ಭಾರತದ ಒಬ್ಬ ರಾಯಭಾರಿಯಾಗಿದ್ದರು. ೨೦೧೬ರಲ್ಲಿ ಅಮೇರಿಕಾದ ದಕ್ಷಿಣ ಕರೋಲಿನಾದ ವಿಶ್ವವಿದ್ಯಾಲಯದಲ್ಲಿ ನಡೆದ ಜಗತ್ತಿನಾದ್ಯಂತ ಚದುರಿರುವ ಆಫ್ರಿಕಾ ಜನಾಂಗದವರ `ಮಹಿಳಾ ಕಲಾ ಸಮ್ಮೇಳನ’ಕ್ಕೆ ಸಿದ್ದಿ ಜನಾಂಗದ ಪ್ರತಿನಿಧಿಯಾಗಿ, ಸಿದ್ದಿ ಕಲಾವಿದೆಯರೊಡನೆ ವಿಶೇಷ ಆಹ್ವಾನಿತರಾಗಿದ್ದರು.
ದೇಶಕಾಲ ಸಾಹಿತ್ಯ ಪತ್ರಿಕೆಯ ವಿನ್ಯಾಸಕರಾಗಿದ್ದ ಇವರು ೩೦೦ಕ್ಕೂ ಹೆಚ್ಚು ಪುಸ್ತಕ ವಿನ್ಯಾಸ ಮಾಡಿದ್ದಾರೆ. ಮಂಚೀಕೇರಿಯ `ಸಿದ್ದಿ ಟ್ರಸ್ಟ್’ ಮತ್ತು ಬೆಂಗಳೂರಿನ `ಲೋಕಚರಿತ ಟ್ರಸ್ಟ್’ ಇವುಗಳ ಸ್ಥಾಪಕ ಸದಸ್ಯರಾದ ಇವರು ಸಿದ್ದಿ ಸಮುದಾಯದೊಟ್ಟಿಗೆ ಮತ್ತು ಬೆಂಗಳೂರಿನಲ್ಲಿ ಯುವ ಕಲಾಸಕ್ತ ವಿದ್ಯಾರ್ಥಿಗಳೊಡನೆ ಕಲಾ ಸಂಸ್ಕೃತಿಯನ್ನು ಕಟ್ಟುವ ಕೆಲಸದಲ್ಲಿ ನಿರತರಾಗಿದ್ದರು.
Reviews
There are no reviews yet.