Description
ಶಿಥಿಲಗೊಂಡ ಕಾವ್ಯಾವಸ್ಥೆಯನ್ನು ಒಡೆಯುವುದಕ್ಕೆ ಯುರೋಪಿನಲ್ಲಿ ಆಯಾಯ ಕಾಲಕ್ಕೆ ಒಂದೊಂದು ಹೊಸ ಕಾವ್ಯ ಸಂಘರ್ಷವೇ ಹುಟ್ಟಿಕೊಳ್ಳುವಂತೆ ಕನ್ನಡದಲ್ಲಿ ಸಾಧ್ಯವಾಗಿಲ್ಲ. ಇದು ದುಃಖದ ಅಥವಾ ವಿಷಾದದ ಹೇಳಿಕೆಯೂ ಅಲ್ಲ. ಬೇಜವಾಬ್ದಾರಿ ಕಾಲ ಹೀಗೆಲ್ಲ ಆಡಿಸುತ್ತದೆ ಎನ್ನುವುದಕ್ಕೆ ಇಲ್ಲಿನ ಮಹಿಳಾ ಕಾವ್ಯ ಗುರುತರ ಸಾಕ್ಷಿಯಾಗಿಯೂ ನಿಲ್ಲಬೇಕಾದ ದರ್ದೂ ಇಲ್ಲ.
ಇರಲಿ, ಇಂಡಿಯಾದಲ್ಲಿ ಹಕ್ಕಿ ಕೂಗಿನಲ್ಲೂ ಬಿರುಕು ಬಿಟ್ಟಿದೆ ಎನ್ನುವ ದಾರುಣ ಸ್ಥಿತಿಯನ್ನು ವ್ಯವಸ್ಥೆಯೊಂದಿಗೆ ರೂಪಕವಾಗಿ ಹೆಣೆಯುವ ಚಂದ್ರಿಕಾ ಹಿಂದಿನ ತಮ್ಮ ಕಾವ್ಯ ಮಾದರಿಗಳನ್ನು ಅಲ್ಲಲ್ಲೇ ಬಿಟ್ಟು ಮುಂದೆ ಸಾಗಿರಬಹುದಾದ ಚಹರೆಗಳನ್ನು ಈ ಹೊಸ ಕಾವ್ಯದಲ್ಲಿ ಓದಬಹುದಾಗಿದೆ. ‘ಹುಟ್ಟಾ ಚೆಲ್ಲುಬಡುಕಿ ನಾನು ಹತ್ತಿದ್ದು ಗಂಟುಗಳು ಮೈತುಂಬಿದ ಮರವ!’ ಅನ್ನುವುದೇ ತನ್ನ ಖಾಸಗಿ ಬದುಕು, ರಾಜಕೀಯ ಮತ್ತು ಸಾಂಸ್ಕೃತಿಕ ರೋಗವನ್ನೂ ಒಟ್ಟೊಟ್ಟಿಗೆ ವ್ಯಕ್ತಪಡಿಸುವುದೇ ಆಗಿದೆ. ಕಾವ್ಯಕ್ಕೆ ದಕ್ಕಬಹುದಾದ ಆಯಾಮಗಳು ಮತ್ತು ಅವು ಧ್ವನಿಸುವ ತಲ್ಲಣಗಳು ಮೈ ನವಿರೇಳಿಸುವಂತಿರಬಾರದು ಬದಲಿಗೆ ಒಡಲು ಚೈತನ್ಯದಿಂದ ನಳನಳಿಸುವಂತಾಗಬೇಕು ಎನ್ನುವ ವಾದಕ್ಕೆ ಈ ಕೆಳಗಿನ ಸಾಲುಗಳು ಪುಷ್ಟಿಯಾಗಿ ನಿಲ್ಲುತ್ತವೆ:
ಜೇಡಿ ಮಣ್ಣನ್ನು ಸುಮ್ಮನೆ ಮಿದಿಯುತ್ತಾ ಬಂದೆ
ಅದು ಪುಟ್ಟ ಹಕ್ಕಿಯಾಯಿತು
ಬಣ್ಣ ಹಚ್ಚಿದೆ ಆಕಾರ ನಿಖರವಾಯ್ತು
ಮತ್ತೂ ಸೂಕ್ಷ್ಮ ಕಣ್ಣು ಬರೆದೆ ಪಿಳಗುಟ್ಟಿತು
ಮೋಹ ಮೂಡಿ ನನ್ನ ಆತ್ಮದ ಸೆಳೆಯನ್ನು ಎರೆದು ಅದರ ಎದೆಗಿಟ್ಟೆ
ಹಕ್ಕಿ ಹಾರಿ ಹೋಯಿತು.
ಹೊಸದಿಕ್ಕನ್ನು ಬಗೆದು ನೋಡುವ ಅಪಥಿಕಳ ಆತ್ಮಚರಿತ್ರಾತ್ಮಕ ಕಾವ್ಯ ‘ಸಹಜ ಕೃಷಿ’ಗೆ ಹಾತೊರೆದ ನಿದರ್ಶನಗಳು ಇಲ್ಲಿ ಹೆಕ್ಕಿದಷ್ಟೂ ಸಿಗುತ್ತವೆ. ಕಾವ್ಯಲೋಕದ ಚಕ್ರವರ್ತಿ ರೂಮಿಯೊಂದಿಗೆ ‘ಒಂದು ಬೆತ್ತಲ ಸಂವಾದ’ವೂ ಇದೆ; ಅದು ದೃಶ್ಯಾತ್ಮಕವಾಗಿಯೂ ಸಶಕ್ತವಾಗಿದೆ.
– ಮಂಜುನಾಥ ವಿ.ಎಂ.
ಜುಲೈ ೩೦, ೨೦೧೭
Reviews
There are no reviews yet.